ಕೇಸ್ ನಂ. ೧೮/೯ ಎಂಬ ಸದಭಿರುಚಿಯ ಚಿತ್ರದಲ್ಲಿ ನಟಿಸಿದ್ದ ನಿರಂಜನಕುಮಾರ್ ಶೆಟ್ಟಿ ನಾಯಕ ನಟನಾಗಿ ನಟಿಸುತ್ತಿರುವ ಚಿತ್ರ ಜಗತ್ ಕಿಲಾಡಿ. ಈ ಚಿತ್ರ ೧೨.೧೨.೨೦೧೬ರಂದು ಮೋದಿ ರಸ್ತೆಯ ಗಣಪತಿ ದೇವಸ್ಥಾನದಲ್ಲಿ ಸರಳ ಪೂಜಾ ಕಾರ್ಯಕ್ರಮದೊಂದಿಗೆ ಮುಹೂರ್ತ ಆಚರಿಸಿಕೊಂಡಿದೆ. ಚಿತ್ರದ ಪ್ರಥಮ ಸನ್ನಿವೇಶಕ್ಕೆ ಸುಬ್ರಮಣ್ಯ ಶರ್ಮ ಆರಂಭ ಫಲಕ ತೋರಿದರು. ರಂಜಿತ್ ಕುಮಾರ್ ಕ್ಯಾಮೆರಾ ಚಾಲನೆ ಮಾದಿದರು.
ಅಕ್ಕ ಧಾರಾವಾಹಿ ಖ್ಯಾತಿಯ ಅನುಪಮಾ ಈ ಚಿತ್ರದಲ್ಲಿ ನಿರಂಜನ್ ಶೆಟ್ಟಿ ಅವರೊಂದಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ನಿರಂಜನ್ ಶೆಟ್ಟಿ ಮತ್ತು ಅನುಪಮಾ ಪಾಲ್ಗೊಂಡಿದ್ದ ಮದುವೆ ದೃಶ್ಯದ ಚಿತ್ರೀಕರಣವನ್ನು ಆರಂಭಿಕ ಸನ್ನಿವೇಶವನ್ನಾಗಿ ಚಿತ್ರೀಕರಿಸಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಕನ್ನಡ ಚಲನಚಿತ್ರರಂಗದ ಗಣ್ಯರು ಮತ್ತು ಸಾಮಾಜಿಕ ಕ್ಷೇತ್ರದ ಖ್ಯಾತನಾಮರು ಆಗಮಿಸಿ ನೂತನ ಚಿತ್ರಕ್ಕೆ ಶುಭ ಹಾರೈಸಿದರು.
‘ಜಗತ್ಕಿಲಾಡಿ’ ಚಿತ್ರದಲ್ಲಿ ನಟ ನಿರಂಜನಕುಮಾರ್ ಶೆಟ್ಟಿ ಅತ್ಯಂತ ವಿಭಿನ್ನ ಹಾಗೂ ವಿಶೇಷ ಪಾತ್ರದಲ್ಲಿ ನಟಿಸುತ್ತಿದಾರೆ. ಎಂ.ಡಿ.ಶ್ರೀದರ್ ನಿರ್ದೇಶನದ ಹಿಟ್ ಚಿತ್ರ ಜಾಲಿಡೇಸ್ನಲ್ಲಿ ಡಿಫೆರೆಂಟ್ ಪಾತ್ರ ಮಾಡಿ ಗಮನ ಸೆಳೆದ ನಿರಂಜನ್ ಕುಮಾರ್ಗೆ ಮತ್ತೊಂದು ಬ್ರೇಕ್ ನೀಡಿದ್ದು ಕೇಸ್ ನಂ.೧೮/೯ಚಿತ್ರ.
ನಿರಂಜನ್ ಅವರು ಈ ಚಿತ್ರದಲ್ಲಿ ಗಾಂಧಿಬಾಬು ಎಂಬ ಡಿಫರೆಂಟ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ನವ ನಿರ್ದೇಶಕ ಧೀರೇಂದ್ರ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದು ತಮಿಳಿನ ‘ಸದುರಂಗ ವೇಟೈ’ ಚಿತ್ರದ ರಿಮೇಕ್. ಹಾಗಂತ ಇಡೀ ಚಿತ್ರವನ್ನು ಯಥಾವತ್ತು ಬಳಸಿಕೊಳ್ಳದೆ, ಅಲ್ಲಿನ ಅಂಶಗಳನ್ನು ಇಟ್ಟುಕೊಂಡು ನಮ್ಮ ನೇಟಿವಿಟಿಗೆ ತಕ್ಕಂತೆ ಬದಲಾಯಿಸಲಾಗಿದೆ. ಅದು ಬರೀ ಸ್ಪೂರ್ತಿ ಅಷ್ಟೇ, ಪೂರ್ತಿ ಅಲ್ಲ ಎನ್ನುತ್ತಾರೆ ನಿರ್ದೇಶಕ ಧೀರೇಂದ್ರ.
ಸಿನಿಟೆಕ್ ಸೂರಿ ಛಾಯಾಗ್ರಹಣ, ಚಿರು ಚಿತ್ರದ ಖ್ಯಾತಿಯ ಸಂಗೀತ ನಿರ್ದೇಶಕ ಗಿರಿಧರ್ ದೀವಾನ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸೂಪರ್ ಮಿನಿಟ್, ಮಜಾಟಾಕೀಸ್ ಮೊದಲಾದ ರಿಯಾಲಿಟಿ ಶೋಗಳಿಗೆ ಹಾಗೂ ಉಪೇಂದ್ರ ಅಭಿನಯದ ಡಾ. ಮೋದಿ ಚಿತ್ರಕ್ಕೆ ಸಂಭಾಷಣೆ ಬರೆದಿರುವ ವಿನಾಯಕ್ ರಾಮ್ ಕಲಗಾರು ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಎಂ.ಎನ್. ವಿಶ್ವ ಅವರ ಸಂಕಲನ ‘ಜಗತ್ಕಿಲಾಡಿ’ ಚಿತ್ರಕ್ಕಿದೆ.
ಲಯನ್ಸ್ ಸಿನಿ ಕ್ರಿಯೇಷನ್ಸ್ ಅಡಿಯಲ್ಲಿ ಕೆ.ಆರ್.ಪುರಂನ ಲಯನ್ ಆರ್.ರಮೇಶ್ಬಾಬು ನಿರ್ಮಾಣದ ಈ ಚಿತ್ರದಲ್ಲಿ ಅಚ್ಯುತ್ ಕುಮಾರ್, ರಂಗಾಯಣರಘು, ರವಿಚೇತನ್, ಕಡ್ಡಿ ವಿಶ್ವ ಮೊದಲಾದವರು ಇತರೆ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ನಿರ್ಮಾಣ ನಿರ್ವಹಣೆಯ ಜವಾಬ್ದಾರಿಯನ್ನು ಉಮೇಶ್ಕುಮಾರ್ ಹೊತ್ತಿದ್ದಾರೆ.